ವಿರಹಿಯ ಬರಹ

ಕಲ್ಲೇ,
ಅಕ್ಷರಶಃ ನೀನು ಕಲ್ಲೇ, ನಾನು ಅಲೆಮಾರಿಯಾದ ಗಾಳಿ, ಎಷ್ಟೇ ತಾಕಿದರೂ, ಅಪ್ಪಳಿಸಿದರೂ ನೀನು ಚಲಿಸಲಾರೆ. ಎಷ್ಟಾದರೂ ನೀನು ಕಲ್ಲೇ! ಕಲ್ಲಿನಂತ ನಿನ್ನ ಮನಸಿಗೆ ನನ್ನ ಸಕಲ ಪ್ರಯತ್ನವೂ ಗಾಳಿಪಾಲೇ...ಪ್ರತೀ ಪತ್ರವೂ ಕೊನೆಯದಾಗಿರಲಿ ಎಂಬ ಸಣ್ಣ ಹಾರೈಕೆಯೊಂದಿಗೆ, ಹತಾಶೆಯೊಂದಿಗೆ ಬರೆಯುತ್ತೇನೆ. ಆದರೆ ಮನಸ್ಸಿನ ನೋವು ಅದೇಗೆ ಈ ಒರಟು ಕೈಗಳಿಗೆ ಗೊತ್ತಾಗುತ್ತೋ ಅರಿಯದು, ಮೆಲ್ಲನೇ ನಿನ್ನ ಮನಸ್ಸಿಗೆ ವಿರುದ್ದವಾದ ಭಾವನೆಯನ್ನೆಲ್ಲಾ, ಈ ಮೃದು ಹಾಳೆಗೆ ಒಪ್ಪಿಸಿಬಿಡುತ್ತೆ.
"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ"
ಹೌದು, ಮಳೆ ನಿಂತು ಹೋಗಿದೆ, ಮಳೆ ಅಪ್ಪಳಿಸಿ, ಮಣ್ಣಿನ ಕಂಪು ಆರಿ ಬರಿದಾಗಿದೆ. ಮಳೆಗಾಲ ಬರುವುದೇ ವರ್ಷಕ್ಕೊಮ್ಮೆ ಮಳೆ ನೆನಪಾದಾಗಲೆಲ್ಲ ನಿನದೇ ನೆನಪು. ನೀನು ಈಗ ದೂರ, ನಿನ್ನ ನೆನಪು ಆರ ತೀರದ ಕಂಪು, ನಿನ್ನೊಂದಿಗೆ ಆಡಿದ ಪ್ರತಿ ಪದವೂ ಉಸಿರಾಗಿ ಊರಿಬಿಟ್ಟಿದೆ. ಅಂದಹಾಗೆ ನೆನಪಾಯ್ತು, ಈ ಪತ್ರದ ಪೀಠಿಕೆ. ಬಹುಶಃ ಓದುತ್ತ ಕುಳಿತಿರುವ ನಿನ್ನ ಗಾಂಭೀರ್ಯ ಮೊಗದಲ್ಲಿ ಮುಗುಳ್ನಗುವೊಂದು ಮೂಡಿರಬೇಕು. ಇಂದಿಗೆ ನಿನ್ನನ್ನು, ನಿನ್ನ ನೆನಪುಗಳನ್ನು ಎದೆಯಲ್ಲಿ ಅರಗಿಸಿಕೊಳ್ಳಲು ಯತ್ನಿಸಿದ ದಿನ, ನೀನಿಲ್ಲ ಆದರೆ ನಿನ್ನ ನೆನಪಿನ್ನೂ ಆರಿಲ್ಲ
ಮಾರ್ಚ್ ೨೨, ೨೦೦೭ ನಿನಗೆ ನೆನಪಿರಬೇಕು, ಇಲ್ಲದಿದ್ದರೂ ಸರಿ. ನಾನು ಮಾತ್ರ ಈ ದಿನದವರೆಗೂ ಆ ದಿನವನ್ನೂ ಮರೆಯಲು ಯತ್ನಿಸಿ, ಪ್ರಯತ್ನಿಸಿ ಸಾಕಾಯ್ತು. ವರ್ಷವಾದರೂ ಅದಿನ್ನು ಸಾಧ್ಯವಾಗಿಲ್ಲ. ಅದಕ್ಕೆ ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎಂದು. ನಿನ್ನ ಪ್ರೇಮಭಿಕ್ಕೆ ಕೇಳಿ, ನಯವಾಗಿ ನೀನಿಲ್ಲವೆಂದ ಮೇಲೆ ಬಿಕ್ಕಳಿಸಿದವನು ನಾನು. ಮತ್ತೆ ಮತ್ತೊಮ್ಮೆ, ಜೀವನದಲ್ಲಿ ಒಮ್ಮೆಯಾದರೂ ಕೇಳಬೇಕೆಂಬ ಆಸೆಯಾಗಿದೆ. ಆ ನನ್ನ ಮೊದಲ ಸಾರ್ಥಕ ಅಳುವಿಗಿಂದು 'ಒಂದು ವರ್ಷ'..
ಆ ದಿನವನ್ನೂ ಏನಿಲ್ಲವೆಂದರೂ ದಿನವೊಂದಕ್ಕೆ ಮೂರರಂತೆ ಜ್ಞಾಪಿಸಿಕೊಂಡಿದ್ದೇನೆ, ಅದರಲ್ಲೇ ಮುಳುಗಿದ್ದೇನೆ, ಹಾಗೇ ಮುಳುಗಿದಾಗಲೆಲ್ಲಾ ಕಣ್ಣೀರು ಒತ್ತರಿಸಿ ಬರುತ್ತದೆ. ಕಾಲ, ಜಾಗೃತ ಮನಸ್ಸು ತಡೆಯುತ್ತದೆ, ತಡೆಯದಿದ್ದರೆ ನಾನು ಅಳುಬುರುಕಿ, ನೀನು ಒರಟ...!
ಇಂದಿಗೆ ವರ್ಷವುರುಳಿತು, ಆ ದಿನ ಆ ಸ್ಥಳದಲ್ಲಿ ತಣ್ಣನೆಯ ಬಿಸಿಲಿತ್ತು, ಅದು ನಿಧಾನವಾಗಿ ಏರುತಲಿತ್ತು, ರುಯ್ಯನೇ ಹೋಗುತ್ತಿದ್ದ ಪ್ರತಿ ವಾಹನವೂ ನನ್ನ ಬಡಿದುಕೊಳ್ಳುತಿಹ ಎದೆಯನ್ನೇ ನೋಡಿ ನಗುತಿಹವೆಂಬ ನಾಚಿಕೆಯಿತ್ತು. ಅವೆಲ್ಲವುಕ್ಕಿಂತ ನನ್ನ ಮನಸ್ಸು ನಿನ್ನ ಕೈಯನ್ನಿಡಿದು ಕೊನೆಯಿಲ್ಲದ ದಾರಿಯಲ್ಲಿ ಪಯಣ ನಡೆಸುವ ಆಸೆ, ಕನಸು ಹೆಣೆಯುತ್ತಿತ್ತು. ಅಸಲು ಆ ದಿನ ನಿನಗೇನು ಅನಿಸಿತ್ತು?
ಆ ದಿನ ಅದೇಕೆ ಅಷ್ಟು ಹತ್ತಿರ ನಿಂತೆ, ರಾತ್ರಿಯೆಲ್ಲ ನಿನಗೆ ಏನು ಹೇಳಬೇಕೆಂಬ ದೊಡ್ಡ ಜಿಜ್ಞಾಸೆ, ಚಿಂತೆ, ಮಂತ್ರ, ಕನಸು ಏನೆಂದರೂ ಸರಿಯೇ ಅವೆಲ್ಲವುಗಳೊಂದಿಗೆ ನಿದ್ದೆ ಮಾಡದೇ ಒಂದು ಬೆಳಗನ್ನು ನೋಡಿಬಿಟ್ಟಿದ್ದೆ. ಆದರೆ ಅದ್ಯಾವಾಗ ನನ್ನೆಲ್ಲ ಎಣಿಕೆ ಮೀರಿ, ಉಸಿರು ತಾಕುವಷ್ಟು ಹತ್ತಿರ ಬಂದೆಯೋ ಎಲ್ಲವನ್ನೂ ಮರೆತುಬಿಟ್ಟೆ. ಪೆದ್ದನಂತೆ ನಕ್ಕ್ಕು ನಿಂತೆ. ಆಗಲಾದರೂ ನನ್ನೆದೆ ಬಡಿತ, ತುಡಿತ ತಿಳಿಯಲಿಲ್ಲವೇ? ಹತ್ತು ನಿಮಿಷವಾದ ಮೇಲೆ ೭೫ ಎ ಬಸ್ ನಲ್ಲಿ ನೀನು ಹೊರಟೆ, ನನಗೆ ನಿನ್ನನ್ನು ನೋಡುವುದಕ್ಕು ಆಗಲಿಲ್ಲ, ನಾನಾಗಲೇ ಮೂಗ, ಕಿವುಡ!!!. ನಿನಗಿಷ್ಟವಿಲ್ಲ ಎಂದು ಹೇಳಿ ಹೋಗಿಬಿಡಬೇಕಿತ್ತು, ಅದನ್ನು ಬಿಟ್ಟು ಏನೇನೋ ಹೇಳಿದೆ ' ಗೋರ್ಕಲ್ಲ ಮೇಲೆ ಮಳೆ ಬಿದ್ದಂತೆ'.
ನನಗೆ ಈಗಲೂ ಅನಿಸುತ್ತೆ ಅಂದು ನಿನಗೆ ನನ್ನನ್ನು ಅಪ್ಪಿ ಹಿಡಿದು ಐ ಲವ್ ಯೂ ಎಂದು ಹೇಳಬೇಕೆಂಬ ಮಹಾನ್ ಉತ್ಕಟವಿತ್ತೆಂದು. ನೀನು ನಿಗ್ರಹಿಸಿದೆ, ನಾನು ಆಗ್ರಹಿಸಲಿಲ್ಲ, ಬರಿ ಗ್ರಹಿಸಿದೆ.
ನೀನು ಸುಳ್ಳು ಎನ್ನಬಹುದು, ಸುಳ್ಳಲ್ಲ ಸತ್ಯ. ನಿನಗಿಷ್ಟವಿಲ್ಲವೆಂದಿದ್ದಲ್ಲಿ ನೀನು ನಿನ್ನ ಗೆಳತಿಯಲ್ಲೇ ಹೇಳಿ ಕಳಿಸಬಹುದಿತ್ತು. ಆದರೆ ನೀನು ಅವಳೊಂದಿಗೆ ಬಂದು ಅವಳ ಎದುರೇ ನನಗಿಷ್ಟವಿಲ್ಲವೆಂದು ನಿನ್ನ ಮುಂಗುರುಳನ್ನು ಸರಿಸಿಕೊಳ್ಳುತ್ತಿರಲಿಲ್ಲ
ಹೌದಲ್ಲವೇ,
ಸರಿ ಈಗಲಾದರೂ ಕೇಳು, ಇಂದಿಗೆ ವರುಷವಾಯ್ತು. ಈ ಕ್ಷಣವೂ ನಾನು ಭೂಮಿಯಂತೆ ಕಾಯುತ್ತಿದ್ದೇನೆ, ಹನಿಯಾಗಿ ಧರೆಗಿಳಿ, ಒಂದಾಗಿ ಬಿಡೋಣ!. ಒಂದೇ ಸಾರಿ ನಿನ್ನನ್ನು ಕೇಳು, ಖಂಡಿತ ನೀನು ನನ್ನೊಪ್ಪುತ್ತಿಯಾ, ಕೇವಲ ನಿನ್ನ ಸಣ್ಣದೊಂದು ನಗುವಿಗೆ, ಸನಿಹಕ್ಕೆ, ಮಾತಿಗೆ, ನಗೆಗೆ, ಒಂಟಿಗಾಲಲ್ಲಿ ಐದಾರು ತಾಸು ಕಳೆದವನು ನಾನು, ನೀನಿಲ್ಲದೇ ಬದುಕಿಯಾನೆ? ನೀನೆಂದುಕೊಂಡ ಹಾಗೆ ನಿನ್ನಿಂದ ದೂರವಾಗಿ ವರ್ಷವಾಗಿ ಇನ್ನೊಬ್ಬಳ ನಗೆಗೆ ಮಾರುಹೋಗಿದ್ದೇನೆಂದು ತಿಳಿದಿದ್ದೀಯಾ, ಖಂಡಿತಾ ಸಾಧ್ಯವಿಲ್ಲ. ಕೇವಲ ಪ್ರೇಮಭಿಕ್ಕೆಗಾಗಿಯೆ ಐದಾರು ವರ್ಷ ತೆಗೆದುಕೊಂಡವನು ಕೊನೆ ಪಕ್ಷ ನಿನ್ನ ಮರೆಯಬೇಕೆಂದರೆ ಕನಿಷ್ಟ ಈ ಜನ್ಮವಾದರೂ ಬೇಕು.
ನಿನ್ನ ಕಲ್ಲು ಮನಸು ಕರಗಲೀ, ನನ್ನ ಬದುಕು ಹಸನಾಗಿಸಲು ನೀನೊಬ್ಬಳು ಸಾಕು. ನಿನ್ನ ಸನಿಹ, ಸಣ್ಣ ನಗುವಿನಿಂದ ಇಡೀ ದಿನವೆಲ್ಲ ಸಂತೋಷದಿಂದ ಕಳೆದವನು ನಾನು, ಇನ್ನು ನೀನೆ ನನ್ನವಳಾದರೆ ಅದೆಷ್ಟು ಸಂತೋಷಮಯವಾದಿತು ಈ ಜನ್ಮವೆಂದು ನೀನೆ ಊಹಿಸಿಕೋ?
 ಅಂದ ಹಾಗೆ ಈ ಒಂದು ವರ್ಷದ ಅಂತರಕ್ಕೆ ನಾ ಬರೆದ ಪತ್ರಗಳೆ ಸಾಕ್ಷಿ, ಪತ್ರಗಳೆಲ್ಲ ಒಂದೊಂದಾಗಿ ಓದು, ನಾ ಪಟ್ಟ ವ್ಯಥೆ, ದುಃಖ ಎಲ್ಲವೂ ಅರ್ಥವಾದೀತು. ಪ್ರೀತಿಯೊಂದಿಗೆ ಸಾವು ಕೂಡ ಬರುತ್ತದೇ, ಆ ಸಾವು ನಿನ್ನ ಪ್ರೀತಿಯಿಂದಲೇ ಆಗಲೀ. 'ಇದ್ದರೂ ನಿನ್ನ ಜೊತೆ, ಹೋದರೂ ನಿನ್ನ ಜೊತೆ' ಎಂದು ಹಾಡುತ್ತಾ ಸಾವಿರ ಪ್ರೇಮಿಗಳು ಸಾವಿನ ಗುಂಗಿನಲ್ಲಿರುತ್ತಾರೆ. ಆ ಗುಂಗು ರಂಗಾಗಿ, ರಕ್ತ ರಂಗೋಲಿಯಾಗಿ ನಿಮ್ಮ ಮನೆ ಎದುರು ಬಿದ್ದಿರುವಾಗ, ನೀ ಹಚ್ಚಬೇಕೆಂದಿದ್ದ ರಂಗೋಲಿ ಚೆಲ್ಲಿ, ಓಡಿ ಹೋಗಿ ಕದವಿಕ್ಕಿ ಬಿಕ್ಕಳಿಸದಿರು

ನಿನ್ನವನು.............

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು